ಕಳೆದ ವರ್ಷ ಬಿಡುಗಡೆಯಾದ ‘ಸನ್ ಆಫ್ ಮುತ್ತಣ್ಣ’ ಚಿತ್ರದ ಸಂದರ್ಭದಲ್ಲೂ ಅಪ್ಪ ಮತ್ತು ಅಣ್ಣನ ಜೊತೆಗೆ ಯಾವಾಗ ನಟನೆ ಎಂಬ ಪ್ರಶ್ನೆಯನ್ನು ಪ್ರಣಾಮ್ ದೇವರಾಜ್ ಅವರನ್ನು ಕೇಳಲಾಗಿತ್ತು. ‘ಕಾಲ ಕೂಡಿ ಬರಬೇಕು …’ ಎಂದು ಪ್ರಣಾಮ್ ಉತ್ತರಿಸಿದ್ದರು.
ಇದೀಗ ಪ್ರಣಾಮ್ ದೇವರಾಜ್ ಅಭಿನಯದ ‘ಶ್ರೀರಸ್ತು’ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಎಂಟ್ರಿ ಕೊಟ್ಟಿದ್ದಾರೆ. ಪ್ರಣಮ್ ಮತ್ತು ಪ್ರಜ್ವಲ್ ಒಂದೇ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಪ್ರಥಮ.
ಆರಂಭದಲ್ಲಿ ‘ಶ್ರೀರಸ್ತು’ ಒಂದು ಲವ್ ಸ್ಟೋರಿ ಎಂದಷ್ಟೇ ಸುದ್ದಿಯಾಗಿತ್ತು. ಚಿತ್ರದಲ್ಲಿ ಪ್ರಣಮ್ಗೆ ಜೋಡಿ ಸಂಜನಾ ಆನಂದ್ ಎನ್ನುವುದಷ್ಟೇ ತಿಳಿದು ಬಂದಿತ್ತು. ಆದರೆ, ಇದೀಗ ಚಿತ್ರಕ್ಕೆ ಪ್ರಜ್ವಲ್ ಕೂಡ ಸೇರಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ಪಾತ್ರವೇನು? ಅವರದ್ದೇನು ಅತಿಥಿ ಪಾತ್ರವಾ? ಅಥವಾ ಪೂರ್ಣಪ್ರಮಾಣದ ಪಾತ್ರವಾ? ಮುಂತಾದ ವಿಷಯಗಳು ಇನ್ನಷ್ಟೇ ಗೊತ್ತಾಗಬೇಕಿದೆ.

ಅಂದಹಾಗೆ ‘ಶ್ರೀರಸ್ತು’, ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ತೆರೆ ಕಾಣಲಿದೆ. ಚಿತ್ರದಲ್ಲಿ ಸುಮನ್, ಆಮನಿ, ಚೈತ್ರಾರೈ, ರವಿ ಶಿವತೇಜ, ‘ಜೋಶ್’ ರವಿ, ರವಿಪ್ರಕಾಶ್ ಹೀಗೆ ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಕಲಾವಿದರು ಸಹ ಕಾಣಿಸಿಕೊಳ್ಳಲಿದ್ದಾರೆ.
ಹರ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಹರಗೌಡ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತೆಲುಗಿನ ಜನಪ್ರಿಯ ಛಾಯಾಗ್ರಾಹಕ ಬಾಲಸರಸ್ವತಿ ಈ ಚಿತ್ರದ ಛಾಯಾಗ್ರಹಣ ಮಾಡುತ್ತಿದ್ದು, ಶಂಕರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ.


