ಈ ಚಿತ್ರಕ್ಕೆ ಹೀರೋ ಇಲ್ಲ; ಪಾತ್ರಗಳಿಂದ ಹುಟ್ಟಿದ್ದೇ ‘ಕಂಟ್ರಿ ಮೇಡ್‍ – ಭಾಗ 2’

ಚಂದನವನ, ಸಿನಿ ಸುದ್ದಿ

ಬಹಳಷ್ಟು ಜನ ನೀವ್ಯಾಕೆ ಒಂದು ಗ್ಯಾಂಗ್ಸ್ಟರ್ ಸಿನಿಮಾ ಮಾಡಬಾರದು ಎಂದು ಅರವಿಂದ್‍ ಕೌಶಿಕ್‍ಗೆ ಸಲಹೆ ನೀಡಿದ್ದರಂತೆ. ಆದರೆ, ಅರವಿಂದ್‍ ಮತ್ರ ಅದರಿಂದ ದೂರವೇ ಇದ್ದರು. ‘ರೌಡಿಸಂ ಚಿತ್ರ ಮಾಡುವುದು ಸುಲಭ. ಒಬ್ಬ ಹೀರೋ ಇರುತ್ತಾನೆ, ಅವನ ಕೈಯಲ್ಲೊಂದು ಲಾಂಗ್‍ ಇರುತ್ತದೆ, ಬರೀ ವೈಭವೀಕರಣ ಮಾಡೋಕೆ ಗ್ಯಾಂಗ್‍ಸ್ಟರ್‍ ಸಿನಿಮಾ ಮಾಡಬೇಕು ಅಂತನಿಸಲಿಲ್ಲ’ ಎನ್ನುತ್ತಾರೆ ಅರವಿಂದ್.

ಹೀಗಿರುವಾಗಲೇ, ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದ ನಂತರ ಅರವಿಂದ್‍ ಕೌಶಿಕ್‍ ಸದ್ದಿಲ್ಲದೆ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಇದುವರೆಗೂ ಬೇರೆಬೇರೆ ಜಾನರ್‍ಗಳ ಚಿತ್ರ ಮಾಡಿದ್ದ ಅವರು, ಇದೇ ಮೊದಲ ಬಾರಿಗೆ ಒಂದು ಗ್ಯಾಂಗ್‍ಸ್ಟರ್ ಕಥೆಯೊಂದನ್ನು ನಿರ್ದೇಶಿಸಿದ್ದಾರೆ. ಅದೇ ‘ಕಂಟ್ರಿ ಮೇಡ್‍ – ಭಾಗ 2’. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ, ಚಿತ್ರದ ಟೀಸರ್‍ ಬಿಡುಗಡೆ ಮಾಡಿದ್ದಾರೆ ಅರವಿಂದ್‍.

ಚಿತ್ರದ ಕುರಿತು ಮಾತನಾಡುವ ಅವರು, ‘ಇಲ್ಲಿ ದೈವ ಮತ್ತು ದೈತ್ಯರ ಒಪ್ಪಂದದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ. ಒಂದು ಊರಲ್ಲಿ ರಾಕ್ಷಸರು ಇರುತ್ತಾರೆ, ಆ ಊರಲ್ಲಿ ದೈವಗಳು ಸಹ ಇರುತ್ತವೆ. ಅಲ್ಲೊಂದು ದೇವಸ್ಥಾನವೂ ಇರುತ್ತದೆ, ಸ್ವಲ್ಪ ದೂರದಲ್ಲಿ ಕೊಲೆಯೂ ಆಗುತ್ತದೆ. ದೇವರಿಗೆ ಅದು ಕಾಣಿಸಲಿಲ್ಲವಾ? ದೈವ ಮತ್ತು ದೈತ್ಯರ ಮಧ್ಯೆ ಏನಾದರೂ ಒಪ್ಪಂದಗಳಾಗಿವೆಯಾ? ನಿಮ್ಮ ಪಾಡಿಗೆ ನೀನು ಕೆಲಸ ಮಾಡು, ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಿನಿ ಎಂದು ಅವರಿಬ್ಬರೂ ಮಾತಾಡಿಕೊಂಡಿದ್ದಾರಾ? ಹಾಗಾದರೆ ಪಾಪ-ಪುಣ‍್ಯ ಎಂದರೇನು? ಚಾಕು ಚುಚ್ಚುವವನೇ ರೌಡಿನಾ? ಅಥವಾ ಅವನಿಗೆ ಆ ಕೆಲಸ ಕೊಟ್ಟವನು ರೌಡಿನಾ? ಈ ತರಹ ಏನೇನೋ ಆಗಿರುವ ಸಮ್ಮಿಶ‍್ರ ಸರ್ಕಾರವೇ ‘ಕಂಟ್ರಿ ಮೇಡ್‍’ ಎನ್ನುತ್ತಾರೆ ಅರವಿಂದ್‍.

ಈ ಚಿತ್ರ ರೂಪುಗೊಂಡಿದ್ದರ ಹಿಂದಿನ ಕಥೆಯನ್ನು ವಿವರಿಸಿದ ಅವರು, ‘ನನ್ನ ಹಿಂದಿನ ಸಿನಿಮಾ ಬಿಡುಗಡೆಯಾದ ಮೇಲೆ ಒಂದು ದಿನ ಪಾವಗಡದ ಕಡೆ ಹೋದೆ. ಬಾಲ್ಯದಿಂದಲೂ ನನಗೆ ಬಹಳ ಕಾಡಿದಂತಹ ಊರು ಅದು. ಅಲ್ಲೇನಾದರೂ ಶೂಟಿಂಗ್‍ ಮಾಡಬೇಕೆಂದು ಆಸೆ ಇತ್ತು. ಆ ಊರಿನಲ್ಲಿ ನಾನು ನೋಡಿದ ಒಂದಿಷ್ಟು ನಿಜ ಜೀವನದ ವ್ಯಕ್ತಿಗಳನ್ನು ಆಧರಿಸಿ ಪಾತ್ರಗಳನ್ನು ಸೃಷ್ಟಿಸಿದೆ. ಹಾಗೆ ಹುಟ್ಟಿಕೊಂಡಿದ್ದೇ ಕಾಜಲ್, ಮಿಲ್ಕಿ, ಮಜ್ಜಿಗೆ, ಬಾಂಬೆ ಬಂಟಿ, ಪಾಯ್ಸನ್ ರವಿ, ಜೋಕರ್‍ ಜಾನಿ, ಜಿಮ್ ಚೇತು, ಪುಷ್ಪ, ಆ್ಯಂಕರ್‍ ಅಂಜಲಿ, ರೀಲ್‍ ಶಾಂತಮ್ಮ, ಡೇರ್ ಡೆವಿಲ್‍ ಸರೋಜ ಮುಂತಾದ ಪಾತ್ರಗಳು. ಆ ಪಾತ್ರಗಳಿಂದ ಹುಟ್ಟಿಕೊಂಡ ಕಥೆಯೇ ‘ಕಂಟ್ರಿ ಮೇಡ್‍ – ಭಾಗ 2’’ ಎಂದರು.

‘ನಮ್ಮೂರಲ್ಲಿ ನೊಣಗಳು ಜಾಸ್ತಿ, ಏಕೆಂದರೆ ನಮ್ಮೂರಲ್ಲಿ ಹೆಣಗಳು ಜಾಸ್ತಿ …’ ಎಂಬ ಒಂದೆಳೆ ಇಟ್ಟುಕೊಂಡು ಈ ಚಿತ್ರದ ಕಥೆ ಬರೆದೆ ಎನ್ನುವ ಅರವಿಂದ್‍, ‘ದ್ವೇಷ, ರೋಷ, ಸಿಟ್ಟು, ಸೇಡಿನ ಯುದ್ಧಗಳನ್ನು ಹೆಚ್ಚಾಗಿ ಗಂಡಸರು ಮಾಡಿದರೂ, ಗಾಯಗಳಾಗೋದು ಮನೆಯಲ್ಲಿರುವ ಹೆಂಗಸರಿಗೆ. ಹೊಸಿಲು ದಾಟಿ ಗಂಡಸ್ತನ ಮೆರೆದು ಚಾಕು ಇರಿಯುವ ಗಂಡಸರಿಗೆ, ಮನೆಯಲ್ಲಿನ ಹೆಂಗಸರ ನೆನಪು ಬರುವುದಿಲ್ಲ. ಈ ಅಂಶವನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಈ ಚಿತ್ರದಲ್ಲಿ ನಾಯಕ, ನಾಯಕಿ, ಕಾಮಿಡಿಯನ್ ಯಾರೂ ಇಲ್ಲ. ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ’ ಎಂದರು.

‘ಕಂಟ್ರಿ ಮೇಡ್‍ – ಭಾಗ 2’ ಚಿತ್ರದಲ್ಲಿ ಅರವಿಂದ್‍ ಕೌಶಿಕ್‍, ಅಭಿಲಾಷ್‍ ದ್ವಾರಕೀಶ್‍, ರಾಘವ್‍ ರಾಮ್‍, ಶಿಲ್ಪಾ ಅರವಿಂದ್‍, ಪ್ರದೀಪ್‍ ರೋಶನ್‍, ಗೌರವ್‍ ಆರ್ಯನ್, ಕುಲದೀಪ್, ಅಶ್ವಿತಾ ಗೌಡ, ಸುಜಿತ್‍ ಶೆಟ್ಟಿ, ಸುಧಾ ಪ್ರಸನ್ನ, ಅಪೂರ್ವಶ್ರೀ, ವೀರೇನ್‍ ಸಾಗರ್‍ ಮುಂತಾದವರು ನಟಿಸಿದ್ದು, ಉಮೇಶ್‍ ಮಠಪತಿ, ಸೂರ್ಯ, ಅರವಿಂದ್‍ ಕೌಶಿಕ್‍ ಮತ್ತು ಚಂದನ್ ಗೌಡ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‍ ರಾಮು ಸಂಗೀತ, ಸೂರ್ಯ ಛಾಯಾಗ್ರಹಣ, ಅಲ್ಟಿಮೇಟ್‍ ಶಿವು ಸಾಹಸ ನಿರ್ದೇಶನವಿದೆ.

ಕೆಲವರ ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗ್ಲೂ ಆಗಲ್ಲ …

Discover more from KannadaScreens

Subscribe now to keep reading and get access to the full archive.

Continue reading