ಸಂದೇಶ್ ನಾಗರಾಜ್ ಅವರ ಮಗ ಸಂದೇಶ್ ತಮ್ಮ ಸಂಸ್ಥೆಯ ಹಲವು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ಮಗಳು ಬೃಂದಾ, ಹೊಸ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ, ಸ್ವತಂತ್ರವಾಗಿ ಸದ್ದಿಲ್ಲದೆ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ.
ಎಸ್.ಬಿ.ವಿ ಪ್ರೊಡಕ್ಷನ್ಸ್ ಅಡಿಯಲ್ಲಿ ಬೃಂದಾ ಎನ್. ಜಯರಾಮ್ ನಿರ್ಮಾಣ ಮಾಡಿರುವ ‘ಅಡಿಕ್ಷನ್’ ಚಿತ್ರವು, ಸೆನ್ಸಾರ್ ಮಂಡಳಿಯಿಂದ ಮಕ್ಕಳ ಚಲನಚಿತ್ರ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಚಿತ್ರ ಜೂನ್ನಲ್ಲಿ ಬಿಡುಗಡೆಯಾಗಲಿದೆ.
‘ಅಡಿಕ್ಷನ್’, ಇದು ಹಿರಿಯರ ಚಟಗಳ ಕುರಿತಾದ ಚಿತ್ರವಲ್ಲ. ಬದಲಿಗೆ, ಮಕ್ಕಳಲ್ಲಿನ ಮೊಬೈಲ್ ಚಟದ ಕುರಿತ ಕಥೆಯಾಗಿದ್ದು, ನೈಜ ಘಟನೆಗಳನ್ನು ಆಧರಿಸಿ ಈ ಕಥೆಯನ್ನು ರಚಿಸಲಾಗಿದೆ. ಅಜಯ್ ಕುಮಾರ್ ಎ.ಜೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ವಿಶೇಷವೆಂದರೆ, ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸುಂದರ ಕೃಷ್ಣ ಅರಸ್ ರವರ ಮೊಮ್ಮಗ, ನಾಗೇಂದ್ರ ಅರಸ್ ರವರ ಮಗ ವಿಧು ಸುಂದರಕೃಷ್ಣ ಅರಸ್ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ‘ಲವ್ ಯು ಮುದ್ದು’ ಖ್ಯಾತಿಯ ಸಿದ್ದು ಮೂಲಿಮನಿ ನಟಿಸಿದ್ದಾರೆ.
ಉಳಿದಂತೆ ರಿಷಿಕ, ಬೇಬಿ ಅಂಕಿತ ಗೌಡ, ಮಾಸ್ಟರ್ ಆರುಷ್ ಗುಣಕಿಮಠ, ಶಾಮಸುಂದರ್, ಸುಂದರ್ ವೀಣಾ, ಹರೀಶ್ ರೈ, ಸಿತಾರಾ, ತನುಶ್ರೀ, ಅನುಪಮಾ ಪಂಚಾಕ್ಷರಿ, ಶೈಲೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ವಿಶೇಷ ಪಾತ್ರದಲ್ಲಿ ನಿಮಾನ್ಸ್ ಮುಖ್ಯಸ್ಥರಾಗಿದ್ದ ಪದ್ಮಶ್ರೀ ಸಿ.ಆರ್ ಚಂದ್ರಶೇಖರ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಮಕ್ಕಳು ಮತ್ತು ಹಿರಿಯರಿಗೆ ಅವರು ಒಂದೊಳ್ಳೆಯ ಸಂದೇಶವನ್ನು ನೀಡಿದ್ದಾರೆ.
‘ಅಡಿಕ್ಷನ್’ ಚಿತ್ರದಲ್ಲಿ ಆರು ಹಾಡುಗಳಿದ್ದು ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಗುಂಡ್ಲುಪೇಟೆ ಸುರೇಶ್ ರವರ ಛಾಯಾಗ್ರಹಣವಿರುವ ಚಿತ್ರ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.


