ಈ ಹಿಂದೆ ಶಿಕ್ಷಣ ವ್ಯವಸ್ಥೆಯ ಸುತ್ತ ನಡೆಯುವ ಕಥೆ ಹೊಂದಿದ ‘ಪಾರ್ಕ್ ರೋಡ್ ೧೦೦ ರೂಪಾಯಿ’ ಚಿತ್ರ ನಿರ್ದೇಶಿಸಿದ್ದ ಆರ್ಯನ್ ತೇಜಸ್, ಇದೀಗ ಸದ್ದಿಲ್ಲದೆ ಇನ್ನೊಂದು ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ವಿಶೇಷವೆಂದರೆ, ಈ ಬಾರಿ ಅವರು ಬರೀ ನಿರ್ದೇಶಕರಷ್ಟೇ ಅಲ್ಲ, ನಾಯಕ ಕೂಡಾ. ‘ನಮ್ ಕರುಣಾಕರ’ ಎಂಬ ಚಿತ್ರವನ್ನು ಮುಗಿಸಿರುವ ಆರ್ಯನ್, ಆ ಚಿತ್ರವನ್ನು ಏಪ್ರಿಲ್ ೦೩ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.
ಆರ್ಯನ್ ತೇಜಸ್, ಕೊರೊನಾಗೂ ಮೊದಲೇ ಈ ಕಥೆಯನ್ನು ರೆಡಿ ಮಾಡಿಕೊಂಡಿದ್ದರಂತೆ. ನಂತರ ಅದನ್ನು ಸ್ನೇಹಿತ ನಮನ್ ನಾರಾಯಣ್ ಅವರಿಗೆ ಹೇಳಿದಾಗ ಅವರಿಗದು ಇಷ್ಟವಾಗಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವೈಭವ್ ಸುರೇಶ್ ಜೊತೆಗೆ ಸೇರಿ, ನಮ್ ಪಾಪ್ಕಾರ್ನ್ ಸಿನಿಮಾ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಹಾಡು ಮತ್ತು ಟ್ರೇಲರ್ ಬಿಡುಗಡೆಯಾಗಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಮೂಡಿಸಿದೆ. ಟ್ರೇಲರ್ಗೆ ಶ್ರೀನಗರ ಕಿಟ್ಟಿ ಧ್ವನಿಯಾಗಿದ್ದಾರೆ.

‘ನಾನು ಕರುಣಾಕರ’ ಪ್ರತಿಯೊಬ್ಬರ ಜೀವನಕ್ಕೂ ಕನೆಕ್ಟ್ ಆಗುವಂಥ ಚಿತ್ರ ಎನ್ನುವ ಆರ್ಯನ್ ತೇಜಸ್, ಇದು ಅಪ್ಪ-ಮಗನ ಬಾಂಧವ್ಯ ಹಾಗೂ ಗಂಡ-ಹೆAಡತಿಯ ಸಂಬAಧದ ಸುತ್ತ ನಡೆಯೋ ಕಥೆ. ಪ್ರತಿಯೊಬ್ಬರ ಮನೆಯಲ್ಲೂ ಒಬ್ಬ ಕರುಣಾಕರ ಇರುತ್ತಾನೆ. ಮಧ್ಯಮ ವರ್ಗದ ಎಲ್ಲ ಕುಟುಂಬದಲ್ಲೂ ನಡೆವ ಕಥೆ ಇದು. ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ ತನ್ನ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗಲು ಎಷ್ಟೆಲ್ಲ ಕಷ್ಟ ಪಡುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ.
ಆರ್ಯನ್ ತೇಜಸ್ ಅವರ ಪತ್ನಿಯಾಗಿ ‘ಭಾರ್ಗವಿ ಎಲ್ ಎಲ್ ಬಿ’ ಖ್ಯಾತಿಯ ರಾಧಾ ಭಗವತಿ ನಟಿಸಿದ್ದಾರೆ. ಇದು ಅವರ ಐದನೇ ಚಿತ್ರವಂತೆ. ‘ಮಧ್ಯಮ ವರ್ಗದ ಗೃಹಿಣಿಯಾಗಿ ನಾನು ಕಾಣಿಸಿಕೊಂಡಿದ್ದೇನೆ, ಈ ಚಿತ್ರದಲ್ಲಿ ಅಭಿನಯಿಸುವಾಗ ನನ್ನ ಬಾಲ್ಯದ ದಿನಗಳ ನೆನಪಾಯ್ತು. ಆಕೆಗೆ ದೊಡ್ಡದಾಗಿ ಏನಾದರೂ ಮಾಡಬೇಕೆಂಬ ಆಸೆಯಿರುತ್ತದೆ, ಆದರೆ ಗಂಡ, ಮಗನಿಗೋಸ್ಕರ ತನ್ನ ಕನಸನ್ನು ಬದಿಗೊತ್ತಿ ಅವರಿಗೆ ಸಪೋರ್ಟ್ ಮಾಡುತ್ತಾಳೆ’ ಎಂದು ವಿವರಿಸಿದರು,
‘ನಾನು ಕರುಣಾಕರ’ ಚಿತ್ರದಲ್ಲಿ ಮಗನ ಪಾತ್ರದಲ್ಲಿ ಮಾ. ಭವೀಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕರಿಸುಬ್ಬು, ಎಂಕೆ ಮಠ, ಬಿ.ಎಂ. ವೆಂಕಟೇಶ್, ಅಪೂರ್ವ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕಾಗಿ ಬೆಂಗಳೂರು, ಮೈಸೂರು, ಮೇಲುಕೋಟೆ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ, ವಿಜಯ್ ರಾಮ್ ಛಾಯಗ್ರಹಣ ಮತ್ತು ರೋಹಿತ್ ಸೋವರ್ ಸಂಗೀತ ಈ ಚಿತ್ರಕ್ಕಿದೆ.
ಪ್ರಾಣಿ ಪ್ರಿಯರಿಗಾಗಿ ‘ಯಾವ ಮೋಹನ ಮುರಳಿ ಕರೆಯಿತು’; ಮಾ 27ರಂದು ತೆರೆಗೆ


