ಸೈಬರ್ ಕ್ರೈಮ್ ವ್ಯಾಪಕವಾಗಿ ಬೇರೂರುತ್ತಿದ್ದರೂ, ಕನ್ನಡದಲ್ಲಿ ಈ ಕುರಿತು ಬಂದಿರುವ ಚಿತ್ರಗಳ ಸಂಖ್ಯೆ ಕಡಿಮೆಯೇ. ಈಗ ಸೈಬರ್ ಕ್ರೈಮ್ ಕುರಿತಾದ ಥ್ರಿಲ್ಲರ್ ಚಿತ್ರವೊಂದು ಸದ್ದಿಲ್ಲದೆ ಮುಗಿದು, ಬಿಡುಗಡೆಗೆ ಅಣಿಯಾಗುತ್ತಿದೆ. ಅದೇ ‘ಅಚ್ಯುತ ಅವತಾರಂ’.
ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಸಿನಿಮಾ ಬಗ್ಗೆ ಕಲಿತು ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ 10 ವರ್ಷಕ್ಕೂ ಹೆಚ್ಚು ಮೇಲ್ಪಟ್ಟು ಕೆಲವು ಚಿತ್ರಗಳಿಗೆ ಕೆಲಸ ಮಾಡಿರುವ ಬೆಂಗಳೂರು ಮೂಲದ ಪುನೀತ್, ಇದೀಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ‘ಅಚ್ಯುತ ಅವತಾರಂ’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ರಾಯ್ರಾ ವೆಂಚರ್ಸ್ನ ರಮೇಶ್ ಸಿ. ರುದ್ರಮೂರ್ತಿ ಮತ್ತು ರಾಕೇಶ್ ಆರ್ ಜಂಟಿಯಾಗಿ ‘ಅಚ್ಯುತ ಅವತಾರಂ’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರವು ಕನ್ನಡದಲ್ಲಿ ಚಿತ್ರೀಕರಣಗೊಂಡು, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ.

ಚಿತ್ರವು ಜಾಗತಿಕ ಸೈಬರ್ ಹಗರಣಗಳ ಕುರಿತು ಬೆಳಕು ಚೆಲ್ಲುತ್ತದೆ. ಕಾಸರಗೂಡಿನಲ್ಲಿರುವ ಸಾಂಪ್ರದಾಯಿಕ ಹಳ್ಳಿಯಲ್ಲಿ ಸಾಗುವ ಈ ಕಥೆಯು, ಸ್ಥಳೀಯ ಸಂಸ್ಕ್ರತಿ ಹಾಗೂ ಸಂಕೀರ್ಣ ಡಿಜಿಟಲ್ ಪ್ರಪಂಚವನ್ನು ಹೈಪರ್ಲಿಂಕ್ ನಿರೂಪಣೆಯೊಂದಿಗೆ ಬೆಸೆಯುತ್ತದೆ.
‘ಅಚ್ಯುತ ಅವತಾರಂ’ ಚಿತ್ರದಲ್ಲಿ ಮಾಳವಿಕಾ ನಂದನ್, ಅವಿನಾಶ್, ಸೀಮಾ ಜಿ. ನಾಯರ್ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರಶಸ್ತಿ ವಿಜೇತ ಆನಂದ್ ಮೀನಾಕ್ಷಿ ಸಂಕಲನ ಈ ಚಿತ್ರಕ್ಕಿದೆ.
ಸದ್ಯ ಚಿತ್ರವು ಡಬ್ಬಿಂಗ್ ಹಂತದಲ್ಲಿದ್ದು, ಮೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.


