ಕೆಲವು ವರ್ಷಗಳ ಹಿಂದೆ ‘ದೇವಿ’ ಎಂಬ ಚಿತ್ರ ಘೋಷಣೆಯಾಗಿತ್ತು. ಮಧು ಬಂಗಾರಪ್ಪ ಅಭಿನಯದ ಮತ್ತು ನಿರ್ಮಾಣದ ಈ ಚಿತ್ರವನ್ನು ಈಶ್ವರ್ ಬಾಳೆಗುಂದಿ ನಿರ್ದೇಶಿಸಿದ್ದರು. ಚಿತ್ರ ಬಿಡುಗಡೆಯ ಹಂತಕ್ಕೆ ಬಂದರೂ, ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ಈಗ ಅದೇ ಹೆಸರಿಟ್ಟುಕೊಂಡು, ಮಂಡ್ಯದ ಯುವ ರೈತ ಚೇತನ್ ಹಾಗೂ ದರ್ಶನ್ ಅವರ ಅಭಿಮಾನಿ, ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಅರಸಲು ಮುಂದಾಗಿದ್ದಾರೆ.
‘ದೇವಿ’ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ. ಆ ನಂತರ ಚಿತ್ರದ ಪತ್ರಿಕಾಗೋಷ್ಠಿಯೂ ನಡೆಯಿತು. ಚೇತನ್ ಹೊಸ ಪ್ರಯತ್ನಕ್ಕೆ ಕರಿಸುಬ್ಬು, ಕಲಾವಿದರಾದ ಶಿವರಾಜ್ ಕೆ.ಆರ್ ಪೇಟೆ, ಹುಲಿ ಕಾರ್ತಿಕ್, ಸಂಭಾಷಣಾಕಾರ ಮಾಸ್ತಿ ಉಪ್ಪಾರಳ್ಳಿ ಮುಂತಾದವರು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚೇತನ್, ‘ಈ ಹಿಂದೆ ಹಲವು ಚಿತ್ರ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದೆ. ಅಲ್ಲಿ ಆದ ಅನುಭವದಿಂದ ಚಿತ್ರರಂಗದ ಸಹವಾಸವೇ ಬೇಡ ಎಂದು ಸುಮ್ಮನಾಗಿದ್ದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನ ಪಡೆದು ಬರುವಾಗ 20 ನಿಮಿಷದಲ್ಲಿ ಕಥೆ ಹೊಳೆಯಿತು. ದೇವಸ್ಥಾನದ ಮುಂದೆ ನಿಂತಾಗ ‘ದೇವಿ’ ಚಿತ್ರದ ಶೀರ್ಷಿಕೆ ಸಿಕ್ಕಿತು. ಈ ಶೀರ್ಷಿಕೆಯ ಹೆಸರಲ್ಲಿ ಈ ಮುಂಚೆ ಮಧು ಬಂಗಾರಪ್ಪ ಸಿನಿಮಾ ಮಾಡಿದ್ದರು, ಅದು ಅರ್ದಕ್ಕೆ ನಿಂತಿದೆ ಎನ್ನುವ ಸಂಗತಿ ವಾಣಿಜ್ಯ ಮಂಡಳಿಯಿಂದ ತಿಳಿಯಿತು. ನಮ್ಮ ಚಿತ್ರದ ಕಥೆ ವಿಷಯ ತಿಳಿದು ದೇವಿ ಶೀರ್ಷಿಕೆ ನೀಡಿದ್ದಾರೆ’ ಎಂದರು.

ಸಾಧನೆ ಮಾಡಲು ಹಳ್ಳಿಯಿಂದ ನಗರಕ್ಕೆ ಬಂದ ಹುಡುಗ ರೌಡಿಸಂಗೆ ಇಳಿಯುವುದು ಚಿತ್ರದ ಕಥೆಯಂತೆ. ‘ಈ ಸಿನಿಮಾ ಮಾಡಲು, ಚಿತ್ರರಂಗಕ್ಕೆ ಬರಲು ಮೂಲ ಕಾರಣ ದರ್ಶನ್. ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ಚಿತ್ರರಂಗಕ್ಕೆ ಬಂದೆ. ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಅಗತ್ಯ ತರಬೇತಿ ಪಡಯುತ್ತಿದ್ದೇನೆ. ಮೋಹನ್ ಮತ್ತು ರುದ್ರ ಮಾಸ್ಟರ್ ಡ್ಯಾನ್ಸ್ ಹೇಳಿಕೊಡುತ್ತಿದ್ದಾರೆ. ಚಿತ್ರದಲ್ಲಿ ಆಕ್ಷನ್, ತಾಯಿಯ ಸೆಂಟಿಮೆಂಟ್ ಸೇರಿದಂತೆ ಚಿತ್ರಕ್ಕೆ ಬೇಕಾದ ಹಲವು ಅಂಶಗಳನ್ನು ಸೇರಿದ್ದೇವೆ’ ಎಂದರು.
ಈ ಚಿತ್ರಕ್ಕೆ ‘ಅಮ್ಮ ಅಂದ್ರೆ ತುಪ್ಪ … ಅಮ್ಮನ್ ಅಂದ್ರೆ ಹಾಲು ತುಪ್ಪಾ …’ ಎನ್ನುವ ಅಡಿಬರಹವಿದ್ದು, ಚೇತನ್ಗೆ ನಾಯಕಿಯಾಗಿ ಕಿರುತೆರೆ ನಟಿ ಭವ್ಯಾ ಗೌಡ ನಟಿಸುತ್ತಿದ್ದಾರೆ. ಮಾಸ್ತಿ ಉಪ್ಪಾರಳ್ಳಿ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.


