‘ಕೆಡಿ – ದಿ ಡೆವಿಲ್’ ಚಿತ್ರ ಕೊನೆಗೂ ಬಿಡುಗಡೆಯಾಗಿದೆ. ಆದರೆ, ನೂರೆಂಟು ವಿಘ್ನಗಳಿಂದ ಚಿತ್ರ ಬಿಡುಗಡೆ ಅಂದುಕೊಂಡ ದಿನದಂದು ಬಿಡುಗಡೆ ಆಗುತ್ತದಾ? ಇಲ್ಲವಾ? ಎಂಬ ಪ್ರಶ್ನೆ ಚಿತ್ರತಂಡಕ್ಕೆ ಎದುರಾಗಿತ್ತಂತೆ. ಅಷ್ಟೇ ಅಲ್ಲ, ನಿರ್ದೇಶಕ ಪ್ರೇಕ್ ಮಧ್ಯರಾತ್ರಿಯಲ್ಲಿ ರಸ್ತೆಯಲ್ಲಿ ಅಳುತ್ತಾ ನಿಂತುಬಿಟ್ಟಿದ್ದಾರಂತೆ. ಹಾಗಂತ ಅವರೇ ಹೇಳಿಕೊಮಡಿದ್ದಾರೆ.
‘ಕೆಡಿ – ದಿ ಡೆವಿಲ್’ ಚಿತ್ರದ ಬಿಡುಗಡೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರೇಮ್, ‘‘ಜೋಗಿ’ ಬಿಡುಗಡೆಯ ಸಂದರ್ಭದಲ್ಲಿ ಸಂಗೀತದ ವಿಷಯದಲ್ಲಿ ಒಂದಿಷ್ಟು ಸಮಸ್ಯೆ ಆಯಿತು. ಆಗ ಮಧ್ಯರಾತ್ರಿ ಮೂರು ಗಂಟೆಗೆ ರಸ್ತೆಯಲ್ಲಿ ಅಳುತ್ತಾ ನಿಂತುಬಿಟ್ಟಿದ್ದೆ. ನನ್ನ ಸಿನಿಮಾ ಸಾಯಿಸಿಬಿಟ್ಟರು ಎಂದು ಅತ್ತುಬಿಟ್ಟಿದ್ದೆ. ಅದೇ ರೀತಿ ‘ಕೆಡಿ – ದಿ ಡೆವಿಲ್’ ಚಿತ್ರದ ಬಿಡುಗಡೆಗೂ ಮೊದಲು ಅದೇ ರೀತಿ ಆಯ್ತು. ರಾತ್ರಿ ಎರಡೂವರೆ ಮೂರು ಗಂಟೆ ಹೊತ್ತಿಗೆ, ಕೊನೆಯ ರೀಲ್ ನನ್ನ ಕೈಯಲ್ಲೇ ಇತ್ತು. ಮಿಕ್ಕ ಎಲ್ಲಾ ರೀಲ್ಗಳನ್ನು ಕಳಿಸಿದ್ದೆ. ಕೊನೆಯ ರೀಲ್ UFO ಮತ್ತು Cubeಗೆ ಕಳಿಸುವುದು ಬಾಕಿ ಇತ್ತು. ಗುರುವಾರ ಸಿನಿಮಾ ಬಿಡುಗಡೆ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ನಮ್ಮ ಹುಡುಗರು ತೆಗೆದುಕೊಂಡು ಹೋಗಿ ಹಾರ್ಡ್ ಡಿಸ್ಕ್ ಕೊಟ್ಟರು. ನಮ್ಮ ಹುಡುಗ ಫೋನ್ ಮಾಡಿ, ‘ಬಿಡುಗಡೆ ಆಗೋದಿಲ್ಲ ಎನ್ನುತ್ತಿದ್ದಾರೆ’ ಎಂದ. ಆದರೆ, ಕೊನೆಗೂ ಅಂದುಕೊಂಡಂತೆಯೇ ಸಿನಿಮಾ ಬಿಡುಗಡೆ ಆಯ್ತು. ನಾನು ಕೊಟ್ಟಿದ್ದು ತಡವಾದ್ದರಿಂದ, ಬೆಳಗ್ಗಿನ ಪ್ರದರ್ಶನ ಸ್ವಲ್ಪ ಹೆಚ್ಚೂಕಡಿಮೆ ಆಯಿತು. ಮಿಕ್ಕಂತೆ ಯಾವುದೇ ಸಮಸ್ಯೆ ಇಲ್ಲದೆ ಪ್ರದರ್ಶನ ಪ್ರಾರಂಭವಾಯಿತು ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ, ‘ನಿನ್ನೆ ಮಾತ್ರ ದೇವರ ಎದುರು ಕುಳಿತುಕೊಂಡು ಇಷ್ಟು ಕಷ್ಟ ಕೊಡಬೇಡ, ಸಾಕಾಗಿ ಹೋಗಿದೆ, ಇನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಅಂತ ಹೇಳಿದ್ದೆ. ಆದರೆ, ಬೆಳಿಗ್ಗೆ ಚಿತ್ರ ಯಾವುದೇ ಸಮಸ್ಯೆ ಇಲ್ಲದೆ ಬಿಡುಗಡೆ ಆಯ್ತು. ಚಿತ್ರ ನೋಡಿದವರು ಇಷ್ಟಪಡುತ್ತಿದ್ದಾರೆ’ ಎಂದಿದ್ದಾರೆ.
ಬೇರೆ ಭಾಷೆಯ ಅವತರಣಿಕೆಗಳು ಮೊದಲು ಬಿಡುಗಡೆ ಆಗಿ ಬಿಡಲಿ. ಭಾಗ 2 ಬರುವುದು ಖಂಡಿತಾ. ಆ ಚಿತ್ರ ತಡವಾಗುವುದಿಲ್ಲ, ಒಂದೇ ವರ್ಷದಲ್ಲಿ ತೆಗೆದುಕೊಂಡು ಬರುತ್ತೇನೆ’ ಎಂದು ಪ್ರೇಮ್ ಹೇಳಿದ್ದಾರೆ.
’ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಬ್ಯಾನರ್ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.


