‘ನಾವು ನಮ್ಮವರು’ ಪರವಾಗಿ ನಿಂತ ಶರಣ್‍, ಅಮೂಲ್ಯ

ಕಿರುತೆರೆ, ಚಂದನವನ, ಸಿನಿ ಸುದ್ದಿ

ಕನ್ನಡ ಕಿರುತೆರೆಯಿಂದಲೇ ತಮ್ಮ ಪಯಣವನ್ನು ಪ್ರಾರಂಭಿಸಿದವರು ನಟ ಶರಣ್‍. ಹಲವು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮನೆತನನ’ ಧಾರಾವಾಹಿಯಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅದನ್ನು ನೋಡಿಯೇ ನಿರ್ದೇಶಕ ಸಿದ್ಧಲಿಂಗಯ್ಯ ತಮ್ಮ ಚಿತ್ರದಲ್ಲಿ ಶರಣ್‍ಗೆ ಅವಕಾಶ ನೀಡಿದ್ದರು. ಅಲ್ಲಿಂದ ಶರಣ್‍ ಚಿತ್ರರಂಗಕ್ಕೆ ಬಂದರು.

ಈಗ್ಯಾಕೆ ಈ ವಿಷಯವೆಂದರೆ, ಬಹಳ ವರ್ಷಗಳ ನಂತರ ಶರಣ್‍ ಕಿರುತೆರೆಗೆ ವಾಪಸ್ಸಾಗಿದ್ದಾರೆ. ಆದರೆ, ಈ ಬಾರಿ ಅವರು ಯಾವುದೇ ಧಾರಾವಾಹಿಯಲ್ಲೂ ನಟಿಸುತ್ತಿಲ್ಲ. ಅದರ ಬದಲು ರಿಯಾಲಿಟಿ ಕಾರ್ಯಕ್ರಮವೊಂದರ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ, ಈ ಕಾರ್ಯಕ್ರಮದ ಮೂಲಕ ನಟಿ ಅಮೂಲ್ಯ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದು, ಅವರ ಜೊತೆಗೆ ಶರಣ್‍ ಮತ್ತು ತಾರಾ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಜೀ ಕನ್ನಡದಲ್ಲಿ ಹಲವು ರಿಯಾಲಿಟಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು, ಈಗ ಆ ಸಾಲಿಗೆ ‘ನಾವು ನಮ್ಮವರು’ ಎಂಬ ಹೊಸದೊಂದು ಕಾರ್ಯಕ್ರಮ ಸೇರ್ಪಡೆಯಾಗಲಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಇದು ವಿಭಿನ್ನ ಪ್ರಯತ್ನ ಎಂದು ಹೇಳಲಾಗುತ್ತಿದೆ. ಇದು ಸಹ ಫ್ಯಾಮಿಲಿ ಕಾರ್ಯಕ್ರಮವಾಗಿದ್ದು, ಹಿರಿತೆರೆ ಮತ್ತು ಕಿರುತೆರೆ ಕಲಾವಿದರು ಅವರ ಕುಟುಂಬದವರ ಜೊತೆಗೆ ಹೇಗೆ ಇರುತ್ತಾರೆ ಎಂಬುದನ್ನು ಪ್ರೇಕ್ಷಕರ ತನಕ ತಲುಪಿಸುವುದೇ ಈ ರಿಯಾಲಿಟಿ ಶೋದ ಮುಖ್ಯ ಉದ್ದೇಶ ಎಂದು ಹೇಳಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ರಜತ್-ಅಕ್ಷತಾ, ಸುಜಯ್-ಸಿಂಚನ, ಪ್ರಿಯ ಕೇಸರಿ-ಶಿವರಾಂ, ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯ, ಶಿಲ್ಪಿ-ಶೈಲೇಶ್, ಸಮೀರ್ ಆಚಾರ್ಯ-ಶ್ರಾವಣಿ ಮುಂತಾದವರು ಈ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಲಿದ್ದಾರೆ.

‘ನಾವು ನಮ್ಮವರು’ ಕಾರ್ಯಕ್ರಮವು ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದ್ದು, ನಿರಂಜನ್‍ ದೇಶಪಾಂಡೆ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

National Awards: ಪಾಪ ಶಾರೂಖ್‍ಗೆ ಪ್ರಶಸ್ತಿ ಸಿಕ್ಕಿರಲಿಲ್ಲ, ಅದಕ್ಕೇ …

Latest Posts

Discover more from KannadaScreens

Subscribe now to keep reading and get access to the full archive.

Continue reading