ಕುಡಿತವಷ್ಟೇ ಅಲ್ಲ, ಒಳ್ಳೆಯ ಸಂದೇಶವೂ ಇದೆಯಂತೆ …

ಹೆಣ್ಮಕ್ಕಳು ಬಾರ್‌ಗೆ ಹೋದರೆ ಏನೇನಾಗುತ್ತದೆ? ಗಂಡಸರ ತರಹದ ಹೆಂಗಸರಿಗೂ ಒಂದು ಬಾರ್ ತೆಗೆದರೆ ಹೇಗೆ? ಇಂಥದ್ದೊಂದು ವಿಷಯ ಇಟ್ಟುಕೊಂಡು ನಿರ್ಮಾಣವಾದೆ ‘ಲೇಡೀಸ್‍ ಬಾರ್‍’ ಎಂಬ ಹೊಸ ಚಿತ್ರ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್‍ ಇತ್ತೀಚೆಗೆ ಬಿಡುಗಡೆ ಆಗಿದೆ.

ಡಿ.ಎಂ.ಸಿ. ಪ್ರೊಡಕ್ಷನ್ಸ್ನಡಿ ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಲೇಡಿಸ್‌ ಬಾರ್’ ಚಿತ್ರದ ಟ್ರೇಲರ್‍ ಅನ್ನು ನಟ ಧರ್ಮ ಕೀರ್ತಿರಾಜ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರ ಉಮೇಶ್ ಬಣಕಾರ್, ನಿರ್ಮಾಪಕ ಶಿಲ್ಪಾ ಶ್ರೀನಿವಾಸ್, ಹರೀಶ್‍ ರಾಜ್‍ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದರು.

ಈ ಚಿತ್ರಕ್ಕೆ ಕಥೆಯೇ ಹೀರೋ ಎನ್ನುವ ನಿರ್ದೇಶಕ ಮುತ್ತು, ‘ಚಿತ್ರದಲ್ಲಿ ಅದ್ಭುತವಾದ ಕಥೆಯಿದೆ. ಕಥೆಯೇ ನಮ್ಮ ಚಿತ್ರದ ಹೀರೋ.  ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಈಗಾಗಲೇ ಜನಪ್ರಿಯವಾಗಿದೆ.  ಹೆಣ್ಣುಮಕ್ಕಳು ಬಾರ್‌ಗೆ ಹೋದರೆ ಏನೇನಾಗುತ್ತದೆ? ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಹಾಗಂತ ‘ಲೇಡಿಸ್‌ ಬಾರ್’  ಚಿತ್ರದಲ್ಲಿ  ಬರೀ ಕುಡಿತವನ್ನಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನವಿದೆ’ ಎಂದರು.

ಸೋಮರಾಜ್‍ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ‘ನಮ್ಮ ಸಮಾಜದಲ್ಲಿ ಈಗ ಯಾವ ವ್ಯವಸ್ಥೆ ಇದೆ ಎನ್ನುವುದನ್ನು ಸಿನಿಮಾ ಮೂಲಕ ತೋರಿಸಿದಾಗ  ಜನರಿಗದು ಸುಲಭವಾಗಿ ಅರ್ಥವಾಗುತ್ತದೆ’ ಎಂದರು.

ಹರೀಶ್‍ ರಾಜ್‍ ಈ ಚಿತ್ರದಲ್ಲಿ ಶಿಳ್ಳೆ ಎಂಬ ರೌಡಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೇಶ್‌ ರಾವ್ ಕೇಸರಕರ್ ಎಂದಿನಂತೆ ಪೊಲೀಸ್ ಪಾತ್ರ ಮಾಡಿದರೆ, ಕೆಂಪೇಗೌಡ ಈ ಚಿತ್ರದಲ್ಲೊಂದು ಅತಿಥಿ ಪಾತ್ರ ಮಾಡಿದ್ದಾರಂತೆ.

ಮಿಕ್ಕಂತೆ ಚಿತ್ರದಲ್ಲಿ ಶಿವಾನಿ, ಮೀನಾಕ್ಷಿ, ಡಾ. ರಾಜಶೇಖರ್, ಶಿವಕುಮಾರ್‍  ಆರಾಧ್ಯ, ಪ್ರೇರಣಾ, ಚೈತ್ರ,  ಎಸ್ಕಾರ್ಟ್ ಶ್ರೀನಿವಾಸ್ ಮುಂತಾದವರು ನಟಿಸಿದ್ದಾರೆ. ಹರ್ಷ ಕಾಗೋಡ್ ಅವರ ಸಂಗೀತ ನಿರ್ದೇಶನ,  ವೀನಸ್‌ ಮೂರ್ತಿ  ಛಾಯಾಗ್ರಹಣ ಈ ಚಿತ್ರಕ್ಕಿದೆ.

‘ನಶೆಯೋ ನಕಾಶೆಯೋ …’; ಶ್ರುತಿ ಹರಿಹರನ್‍ ಪ್ರಶ್ನೆ

Leave a Reply