‘ವಾರಣಾಸಿ’ ಎಂಬ ಚಿತ್ರವನ್ನು ರಾಜಮೌಳಿ ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಅಭಿನಯಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಮಧ್ಯೆ, ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದಕ್ಕೆ ರಾಜಮೌಳಿ ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.
ಹೌದು, ಮೂಲಗಳ ಪ್ರಕಾರ, ‘ವಾರಣಾಸಿ’ಯಂತಹ ಕಥೆಯನ್ನು ಮೂರು ತಾಸುಗಳಲ್ಲಿ ಹೇಳುವುದು ಕಷ್ಟವಂತೆ. ಹಾಗಾಗಿ, ಚಿತ್ರವನ್ನು ಎರಡು ಭಾಗಗಳಲ್ಲಿ ಯಾಕೆ ಹೇಳಬಾರದು ಎಂಬ ಯೋಚನೆಯೊಂದು ಚಿತ್ರತಂಡವನ್ನು ಕಾಡುತ್ತಿದೆಯಂತೆ. ಹೇಗೂ ಇತ್ತೀಚೆಗೆ ಎರಡು ಭಾಗಗಳಲ್ಲಿ ಬಿಡುಗಡೆಯಾದ ‘ದುರಂಧರ್’ ಚಿತ್ರವು ದೊಡ್ಡ ಯಶಸ್ಸು ಸಾಧಿಸಿದೆ. ಇದಕ್ಕೂ ಮೊದಲು ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ಸಹ ಎರಡು ಭಾಗಗಳಲ್ಲಿ ಬಿಡುಗಡೆಯಾಗಿ, ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಟ್ರೆಂಡ್ಸೆಟರ್ ಆಗಿತ್ತು.

ಹಾಗಾಗಿ, ‘ವಾರಣಾಸಿ’ ಚಿತ್ರವನ್ನು ಸಹ ಎರಡು ಭಾಗಗಳಲ್ಲಿ ಹೇಳುವ ಯೋಚನೆ ರಾಜಮೌಳಿ ಮತ್ತು ತಂಡಕ್ಕಿದೆ. ಇದು ನಿಜವೇ ಆದರೆ, ಆಗ ರಾಜಮೌಳಿ ತಮ್ಮ ಕಲ್ಪನೆಯ ಜಗತ್ತು ಮತ್ತು ಕಥೆಯನ್ನು ಇನ್ನಷ್ಟು ವಿಸ್ತರಿಸಿ ಎರಡು ಭಾಗಗಳಲ್ಲಿ ತೋರಿಸುವ ಸಾಧ್ಯತೆ ಹೆಚ್ಚಿದೆ.
ಇದೊಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ‘ವಾರಣಾಸಿ’ ಚಿತ್ರವನ್ನು ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ ಬಿಝಿನೆಸ್ ಸಂಸ್ಥೆಗಳಡಿ ಕೆ.ಎಲ್. ನಾರಾಯಣ ಮತ್ತು ಎಸ್.ಎಸ್. ಕಾರ್ತಿಕೇಯ ಜೊತೆಯಾಗಿ ನಿರ್ಮಿಸುತ್ತಿದ್ದು, ರಾಜಮೌಳಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ರಾಜಮೌಳಿ ತಂದೆ ವಿಜಯಪ್ರಸಾದ್ ಕಥೆ-ಚಿತ್ರಕಥೆ ರಚಿಸಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು, ರುದ್ರ ಎಂಬ ಪಾತ್ರದಲ್ಲಿ ಅಭಿನಯಿಸಿದರೆ, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್, ಮೋಹಿನಿ ಮತ್ತು ಕುಂಭ ಎಂಬ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಚಿತ್ರ ‘ದುರಂಧರ್ 2’ ಎಂದ ರಜನಿಕಾಂತ್


