ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ನಿರ್ದೇಶನದ, ಶ್ರೀ ರಾಮ್ ಫಿಲಂಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾಗೂ ನಿರಂಜನ್ – ಐಶ್ವರ್ಯ ಅರ್ಜುನ್ ನಾಯಕ – ನಾಯಕಿಯಾಗಿ ನಟಿಸಿರುವ ‘ಸೀತಾ ಪಯಣ’ ಚಿತ್ರ ಫೆಬ್ರವರಿ 14 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರ್ಜುನ್ ಸರ್ಜಾ, ‘’ಸೀತಾ ಪಯಣ” ನಾನು ನಿರ್ದೇಶಿಸಿರುವ ಕನ್ನಡದ ಎರಡನೇ ಸಿನಿಮಾ. ಈವರೆಗೂ ಸುಮಾರು ಹದಿನೈದು ಚಿತ್ರಗಳ ನಿರ್ದೇಶನ ಮಾಡಿದ್ದೇನೆ. “ಸೀತಾ ಪಯಣ”ದ ಕಥೆಯನ್ನು ಹದಿಮೂರು ವರ್ಷಗಳ ಹಿಂದೆಯೇ ಸಿದ್ದಮಾಡಿಕೊಂಡಿದೆ. ಯಾವಾಗ ಇದನ್ನು ಚಿತ್ರ ಮಾಡುತ್ತೇನೊ ಎಂದು ಕಾಯುತ್ತಿದೆ. ಈಗ ಕಾಲ ಕೂಡಿಬಂದಿದೆ. ನನ್ನ ಮಗಳು ಐಶ್ವರ್ಯ ನಾಯಕಿಯಾಗಿ, ನಿರಂಜನ್ ನಾಯಕನಾಗಿ ನಟಿಸಿರುವ ಚಿತ್ರವಿದು. ನಾನು ಕೂಡ ಅಭಿನಯಿಸಿದ್ದೇನೆ. ಧ್ರುವ ಸರ್ಜಾ ಅವರು ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಅವರ ಅಭಿಮಾನಿಗಳಿಗೆ ಈ ಪಾತ್ರ ಮೆಚ್ಚುಗೆಯಾಗುತ್ತದೆ’ ಎಂದರು.

‘ಸೀತಾ ಪಯಣ’ ಬರೀ ವ್ಯಕ್ತಿಯ ಪಯಣವಲ್ಲ ಎನ್ನುವ ಅರ್ಜುನ್ ಸರ್ಜಾ, ‘ಇದು ಮನಸ್ಸಿನ ಪಯಣ. ನಾವು ತಿಳಿದುಕೊಳ್ಳಬೇಕಿರುವ ಮೌಲ್ಯಗಳ ಪಯಣ. ಹಾಗೂ ಭಾವನೆಗಳ ಜೊತೆಗಿನ ಸುಂದರ ಪಯಣ. ಒಟ್ಟಿನಲ್ಲಿ ಈ ಚಿತ್ರ ನೋಡಿದವರು ಚಿತ್ರಮಂದಿರದಿಂದ ಹೋಗುವಾಗ ಒಂದು ನಗುವಿನ ಜೊತೆ ಹೋಗುವುದು ಖಂಡಿತ. ಫೆಬ್ರವರಿ 14 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ‘ಸೀತಾ ಪಯಣ’ ಬಿಡುಗಡೆಯಾಗುತ್ತಿದೆ’ ಎಂದರು ಅರ್ಜುನ್ ಸರ್ಜಾ.
ಈ ಚಿತ್ರದಲ್ಲಿ ಪ್ರಕಾಶ್ ರೈ, ಸತ್ಯರಾಜ್, ಕೋವೈ ಸರಳ ಅವರಂತಹ ಅನುಭವಿ ಕಲಾವಿದರ ತಾರಾಬಳಗವಿದೆ. ಜೊತೆಗೆ ಅರ್ಜುನ್ ಸರ್ಜಾ ಮತ್ತು ಧ್ರುವ ಸರ್ಜಾ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ರುಬೆನ್ಸ್ ಸಂಗೀತ, ಬಾಲಮುರುಗನ್ ಛಾಯಾಗ್ರಹಣ ಹಾಗೂ ಆಯೂಬ್ ಅವರ ಸಂಕಲನ ಈ ಚಿತ್ರಕ್ಕಿದೆ.
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ‘ಸೀತಾ ಪಯಣ’ ಬಿಡುಗಡೆಯಾಗುತ್ತಿದೆ.


