ಗಣೇಶ್ ಅಭಿನಯದ ‘ಪಿನಾಕ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನೆಲಮಂಗಲ ಬಳಿ ಚಿತ್ರಕ್ಕಾಗಿ ಆರು ಎಕರೆ ಪ್ರದೇಶದಲ್ಲಿ ದೊಡ್ಡ ಸೆಟ್ ಹಾಕಲಾಗಿದೆ. ಸೆಟ್ ಎಂದರೆ ಅದು 500 ವರ್ಷಗಳ ಹಿಂದಿನ ದೇವಗಿರಿ ಎಂಬ ಸಾಮ್ರಾಜ್ಯದ ಸೆಟ್. ಒಂದು ನಗರವನ್ನೇ ನಿರ್ಮಿಸಲಾಗಿದ್ದು, ಮಧ್ಯದಲ್ಲೊಂದು ಅರ್ಧನಾರೀಶ್ವರನ ಪ್ರತಿಮೆ ನಿಲ್ಲಿಸಲಾಗಿದೆ.
ಇಲ್ಲಿ ಕಳೆದ 32 ದಿನಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಇನ್ನೂ 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. ಈ ಸೆಟ್ ಚಿತ್ರದಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ, ಚಿತ್ರತಂಡ ಈ ಸೆಟ್ ಹೇಗಿದೆ ಎಂದು ಗೌಪ್ಯವಾಗಿಟ್ಟಿದೆ. ಶನಿವಾರ ಸಂಜೆ ಸೆಟ್ಗೆ ಮಾಧ್ಯಮದವರನ್ನು ಕರೆಸಿಕೊಂಡ ಸಂದರ್ಭದಲ್ಲೂ, ಸೆಟ್ನ ಚಿತ್ರೀಕರಣ ಮಾಡಬಾರದು ಎಂದು ವಿನಂತಿಸಿಕೊಳ್ಳಲಾಯಿತು. ಚಿತ್ರಂಡದವರು ಮತ್ತು ಚಿತ್ರಕ್ಕೆ ಸಂಬಂಧಪಟ್ಟವರನ್ನು ಹೊರತುಪಡಿಸಿದರೆ, ಇಲ್ಲಿ ಹೊರಗಿನವರಿಗೆ ಸುಲಭವಾಗಿ ಎಂಟ್ರಿ ಇಲ್ಲ. ಮಾಧ್ಯಮದವರಿಗೆ ಇಡೀ ನಗರವನ್ನು ಪರಿಚಯ ಮಾಡಿಕೊಟ್ಟ ನಂತರ ನಿರ್ದೇಶಕ ಧನಂಜಯ್ ಚಿತ್ರತಂಡದವರ ಜೊತೆಗೆ ಮಾತಿಗೆ ಕುಳಿತರು.
‘ಮಳೆ, ಬಿಸಿಲು, ಗಾಳಿಯ ನಡುವೆ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಮಾಡುತ್ತಿದ್ದೇವೆ. ಅದಕ್ಕೂ ಮುನ್ನ ಎರಡು ತಿಂಗಳ ಕಾಲ ಸೆಟ್ ನಿರ್ಮಾಣದ ಕೆಲಸ ನಡೆದಿದೆ. ಸಂತೋಷ್ ಪಾಂಚಲ ಮತ್ತು ತಂಡದವರು ಈ ಸೆಟ್ ನಿರ್ಮಿಸಿದ್ದಾರೆ. ಯುದ್ಧ ನಡೆದ ನಂತರದ ದೃಶ್ಯಗಳನ್ನು ಇಂದು ಚಿತ್ರೀಕರಣ ಮಾಡಿದ್ದೇವೆ. ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ 800 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಚಿತ್ರೀಕರಣ ಮಾಡಿ, ಹೈದರಾಬಾದ್ಗೆ ಫುಟೇಜ್ ಕಳಿಸುತ್ತಿದ್ದೇವೆ. ಅಲ್ಲಿ ಗ್ರಾಫಿಕ್ಸ್ ಕೆಲಸ ಸತತವಾಗಿ ನಡೆಯುತ್ತಿದೆ’ ಎಂದು ಮಾಹಿತಿ ಕೊಟ್ಟರು.
‘ಪಿನಾಕ’ ಎಂದರೆ ಒಬ್ಬ ರಕ್ಷಕ ಎನ್ನುವ ಅವರು, ‘ಇದೊಂದು ಕಾವಲುಗಾರ ಪರಂಪರೆಯ ಕುರಿತಾದ ಚಿತ್ರ. ನಯನ್ ಸಾರಿಕಾ ಮತ್ತು ಅರ್ಚನಾ ಅಯ್ಯರ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ. ಇದು ಒತ್ತಡದಲ್ಲಿ ಮಾಡುವ ಕೆಲಸವಲ್ಲ. ಒಂದೊಂದು ಸಣ್ಣ ದೃಶ್ಯಕ್ಕೂ ಸಾಕಷ್ಟು ಸಮಯವಾಗುತ್ತಿದೆ. ಗಣೇಶ್ ಜೊತೆಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರ ಜೊತೆಗೊಂದು ಒಳ್ಳೆಯ ಸಂಬಂಧ ಇದೆ. ಅವರೊಂದಿಗೆ ಕೆಲಸ ಮಾಡುವುದು ಖುಷಿಯ ವಿಚಾರ. ಈ ಚಿತ್ರಕ್ಕೆ ಅವರ ಸಹಕಾರ ದೊಡ್ಡದು. ಇನ್ನು ನಿರ್ಮಾಪಕರು ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದಾರೆ, ಇದು ನನ್ನೊಬ್ಬನ ಚಿತ್ರವಲ್ಲ. ಿದೊಂದು ತಂಡದ ಚಿತ್ರ’ ಎಂದರು.

ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ವಿಜಯಾ ಮಾತನಾಡಿ, ‘ಗಣೇಶ್ ಜೊತೆಗೆ ಚಿತ್ರ ಮಾಡಬೇಕು ಎಂಬುದು ನನ್ನ ಸಹೋದರನ (ವಿಶ್ವಪ್ರಸಾದ್) ಆಸೆಯಾಗಿತ್ತು. ಅವರ ಜೊತೆಗೆ ಚಿತ್ರ ಮಾಡಬೇಕು ಎಂದು ನಿರ್ಧಾರವಾದಾಗ, ಕಥೆ ಸಹ ಇರಲಿಲ್ಲ. ಗಣೇಶ್ ಅವರಿಗೆ ಎಂಥಾ ಚಿತ್ರ ಮಾಡಬೇಕು ಎಂದು ಯೋಚಿಸಿ, ಒಂದು ವಿಭಿನ್ನ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.
ತಮ್ಮ ನಿರ್ಮಾಣ ಸಂಸ್ಥೆಯು ಫ್ಯಾಕ್ಟರಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಅವರು, ‘ಕಳೆದ ಏಳು ವರ್ಷಗಳಲ್ಲಿ ನಮ್ಮ ಸಂಸ್ಥೆಯಿಂದ 50 ಚಿತ್ರಗಳು ತಯಾರಾಗಿವೆ. ಈ ಪೈಕಿ 43 ಬಿಡುಗಡೆಯಾದರೆ, ಏಳು ಚಿತ್ರಗಳು ಬಿಡುಗಡೆ ಆಗುವುದಕ್ಕೆ ತಯಾರಿ ನಡೆಸಿವೆ. 20 ಚಿತ್ರಗಳು ಬೇರೆಬೇರೆ ಹಂತಗಳಲ್ಲಿದೆ. ಕನ್ನಡದಲ್ಲಿ ಶಿವಣ್ಣ, ಧ್ರುವ ಸರ್ಜಾ ಮತ್ತು ದರ್ಶನ್ ಚಿತ್ರ ಮಾಡುವ ಯೋಚನೆ ಇದೆ’ ಎಂದರು.
ಈ ಚಿತ್ರದಲ್ಲಿನ ರಾಜಗುರುವಿನ ಪಾತ್ರಕ್ಕೆ ಶ್ರೀನಿವಾಸಮೂರ್ತಿ ಅವರೇ ಬೇಕು ಎಂದು ಗಣೇಶ್ ಪಟ್ಟುಹಿಡಿದರಂತೆ. ಈ ಕುರಿತ ಮಾತನಾಡಿದ ಅವರು, ‘’ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಂತರ ಗಣೇಶ್ ಜೊತೆಗೆ ಬಾಂಧವ್ಯ ಗಟ್ಟಿಯಾಗಿದೆ. ಈ ಚಿತ್ರವನ್ನು ನೀವೇ ಮಾಡಬೇಕು ಎಂದು ಅವರು ಹೇಳಿದರು. ಈ ಚಿತ್ರವು ಬೇರೆಯದೇ ಲೆವೆಲ್ನಲ್ಲಿದೆ’ ಎಂದರು.
ಬರುವಾಗಲೇ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂಬ ತೀರ್ಮಾನದೊಂದಿಗೆ ನಿರ್ಮಾಪಕರು ಬಂದರು ಎಂದ ಗಣೇಶ್, ‘ಈ ತರಹದ ಪಾತ್ರವನ್ನು ನನ್ನಿಂದ ಮಾಡಿಸಬಹುದು ಎಂದು ಮಾಡಿಸುತ್ತಿದ್ದಾರೆ. ಪ್ರತಿ ದೃಶ್ಯದಲ್ಲೂ ನಿರ್ಮಾಪಕರು ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಿ ಎರಡು ದಿನಗಳಲ್ಲೇ ನಿರ್ಮಾಪಕಿ ವಿಜಯಮ್ಮ ಕಿರುಚಾಡುತ್ತಿದ್ದರು. ಏನು ಎಂದು ಕೇಳಿದಾಗ, ಬರೀ 600 ಜ್ಯೂನಿಯರ್ ಕಲಾವಿದರು ಮಾತ್ರ ಬಂದಿದ್ದಾರೆ, 800 ಜನ ಬರಬೇಕಿತ್ತು ಎಂದರು. ಕಡಿಮೆಯಾದರೆ ಹಣ ಉಳಿಯುತ್ತದೆ ಎಂದು ಖುಷಿಪಡಬೇಕು. ಆದರೆ, ಅವರು ಹಾಗಲ್ಲ. ಈ ಸೆಟ್ ಈ ಮಟ್ಟಕ್ಕೆ ಬರಬೇಕೆಂದರೆ ಅವರು ಮತ್ತು ನಿರ್ದೇಶಕ ಧನಂಜಯ್ ಕಾರಣ. ನಾಲ್ಕೈದು ತಿಂಗಳು ನಿಂತು ಸೆಟ್ ಹಾಕಿಸಿದ್ದಾರೆ. ಧನು ಮೊದಲ ಚಿತ್ರದಲ್ಲೇ ಇಂಥದ್ದೊಂದು ದೊಡ್ಡ ಪ್ರಯತ್ನ ಮಾಡುತ್ತಿದ್ದಾನೆ. ಅವನು ಹೇಗೆ ಮಾಡಬಹುದು ಎಂಬ ಪ್ರಶ್ನೆ ನನಗೂ ಇತ್ತು. ಆದರೆ, ಇಲ್ಲಿ ನೂರಕ್ಕೆ ನೂರು ತೆಗೆದಿದ್ದಾನೆ. ಪ್ರತಿ ದಿನ ಸೆಟ್ನಲ್ಲಿ ನಾಲ್ಕು ಕ್ಯಾಮೆರಾಳಿವೆ. 32 ದಿನಗಳಲ್ಲಿ 64 ದಿನಗಳ ಕೆಲಸವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು, ‘ಬಹಳ ಖುಷಿಕೊಟ್ಟ ಪಾತ್ರವಿದು. ನನಗೆ ಖುಷಿಕೊಟ್ಟರೆ ಪ್ರೇಕ್ಷಕರಿಗೂ ಖುಷಿಯಾಗುತ್ತದೆ ಎಂದು ನಂಬಿದವನು ನಾನು. ಇದು ಬೇರೆ ತರಹದ ಸಿನಿಮಾ. ನನ್ನ ಚಿತ್ರಜೀವನದಲ್ಲಿ ವಿಭಿನ್ನವಾದ ಸಿನಿಮಾ ಎಂದು ಶ್ರೀನಿವಾಸಮೂರ್ತಿ ಹೇಳಿದರು. ಅದನ್ನು ನಿಜವಾಗಿಸಲು ಸಂಪೂರ್ಣವಾಗಿ ಪ್ರಯತ್ನ ಮಾಡುತ್ತೇನೆ’
ಈ ಸಂದರ್ಭದಲ್ಲಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣ, ರವೀಂದ್ರನಾಥ್, ಛಾಯಾಗ್ರಾಹಕ ಕರಮ್ ಚಾವ್ಲಾ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ನನ್ನ ಮಾತೃಭಾಷೆಯನ್ನು ನಾನು ಚೆನ್ನಾಗಿ ಮಾತಾಡದೆ, ಇನ್ನ್ಯಾರು ಚೆನ್ನಾಗಿ ಮಾತಾಡ್ತಾರೆ?


