ನಮ್ಮ ಚಿತ್ರತಂಡದ ಬಹುತೇಕ ಸದಸ್ಯರು ಅಲೆಮಾರಿಗಳು ಎಂದರು ನಿರ್ದೇಶಕ ಸಿದ್ದು ಕಟ್ಟಿಮನಿ. ಬರೀ ನಿಮ್ಮ ಚಿತ್ರತಂಡದವರಷ್ಟೇ ಅಲ್ಲ, ಇಂದು ಜೀವನದಲ್ಲಿ ಏನಾದರೂ ಸಾಧಿಸಿದವರೆಲ್ಲರೂ ಹಿಂದೊಮ್ಮೆ ಅಲೆಮಾರಿ ಬದುಕು ಬಾಳಿದವರೇ ಎಂದರು ಎನ್.ಎಂ. ಸುರೇಶ್ ಮತ್ತು ಉಮೇಶ್ ಬಣಕಾರ್.
ದಿವ್ಯ ಕುಮಾರ್ ನಿರ್ಮಾಣದ ಹಾಗೂ ಸಿದ್ದು ಸಿ ಕಟ್ಟಿಮನಿ ನಿರ್ದೇಶನದ ‘ಅಲೆಮಾರಿ ಈ ಬದುಕು’ ಚಿತ್ರವು ಫೆಬ್ರವರಿ 16 ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಇತ್ತೀಚಿಗೆ ಚಿತ್ರ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಯಾದವು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಟ ಹಾಗೂ ಸಮಾಜಿಕ ಹೋರಾಟಗಾರ ಚೇತನ್ ಅಹಿಂಸ ಹಾಗೂ ಪರಿಸರ ಪ್ರೇಮಿ ಪ್ರಕೃತಿ ಪ್ರಸನ್ನ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಚಿತ್ರದ ಕುರಿತು ಮಾತನಾಡುವ ಸಿದ್ದು ಕಟ್ಟಿಮನಿ, ‘ನಮ್ಮ ಚಿತ್ರತಂಡದ ಬಹುತೇಕ ಸದಸ್ಯರು ಅಲೆಮಾರಿಗಳು. ಒಂದು ಹಂತ ತಲುಪಬೇಕೆಂದು ಅಲೆದು, ಅಲೆದು ಇಂದು ಇಲ್ಲಿ ಬಂದು ಕುಳಿತ್ತಿದ್ದೇವೆ. ಅಲೆಮಾರಿಗಳ ಕುರಿತಾಗಿಯೇ ನಮ್ಮ ಚಿತ್ರದ ಕಥೆ ಇದೆ. ‘ಪ್ರೇಮ ಪೂಜ್ಯಂ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ದೇಶನವನ್ನು ನಾನೇ ಮಾಡಿದ್ದೇನೆ’ ಎಂದರು.
ಬಹಳ ದಿನಗಳ ನಂತರ ಸಿನಿಮಾ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡ ಚೇತನ್ ಅಹಿಂಸ, ‘ಈ ತಂಡದವರನ್ನು ನಾನು ಮೊದಲು ಭೇಟಿ ಮಾಡಿದಾಗ, ಇವರಿಗೆ ಉತ್ಸಾಹ ಇದೆ ಎಂದು ಮಾತ್ರ ಗೊತ್ತಿತ್ತು. ಹಾಡು, ಟ್ರೇಲರ್ ನೋಡಿದ ಮೇಲೆ ಪ್ರತಿಭೆಯೂ ಇದೆ ಎಂದು ಅರ್ಥವಾಗಿದೆ’ ಎಂದರು.
‘ಅಲೆಮಾರಿ ಈ ಬದುಕು’ ಚಿತ್ರದಲ್ಲಿ ಐದು ಹಾಡುಗಳಿದೆ. ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ಹಾಗೂ ಮನೋಜ್ ಸೌಗಂದ್ ಹಾಡುಗಳನ್ನು ರಚಿಸಿದರೆ, ತ್ಯಾಗರಾಜ್ ಸಂಗೀತ ಸಂಯೋಜಿಸಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿವೆ.
ಚಿತ್ರದಲ್ಲಿ ಶ್ರೀಧರ್ ಅಟವಿ, ಸಂದೀಪ್, ರಾಘವೇಂದ್ರ ಸಿ ಕಟ್ಟಿಮನಿ, ಸಹನ, ನೀಲಾಂಬಿಕಾ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.


